Monday, March 16, 2015

ಡಾ| ಮುರಲೀಧರ ರಾಮಚಂದ್ರ ಕಾಮತ್

ಜನ್ಮ ದಿನಾಂಕ: 6 -9 -1934
ಜನ್ಮಸ್ಥಳ: ಚರೀ(ಅಲೀಬಾಗ್)
ಜಾತಿ ಘಟಕ: ಭಾಲಾವಲೀಕರ್
ಗೋತ್ರ: ವಸಿಷ್ಠ
ಕುಲದೇವರು: ದೇವಕಿ ರವಳನಾಥ
ನಿವಾಸ ಸ್ಥಳ : 549, ವಿಲ್ಸಾ ಜಸವಂತ್, T.P.S. 3, ಖಾರ್ ಮುಂಬೈ -4000052
ದೂರವಾಣಿ: 6490790 (ನಿವಾಸ)

     ಮುಂಬೈಯ ಟಾಟಾ ಮೆಮೋರಿಯಲ್ ಹಾಸ್ಪಿಟಲ್ ನ G U ಮತ್ತು G Y N ಸರ್ವಿಸ್ ನ ಮುಖ್ಯ ಸರ್ಜನ್ ಡಾ| ಮುರಲೀಧರ ಕಾಮತ್ ಇವರು ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಭಾರತದಲ್ಲಿಯೇ ತಜ್ಞ ಡಾಕ್ಟರ್ 1957 ಅಕ್ಟೋ ಬರ್ ನಲ್ಲಿ ಆವರು M.B.B.S ಪರೀಕ್ಷೆ ಉತ್ತಿರ್ಣರಾಗಿ, 6 ವರ್ಷಗಳಲ್ಲಿ “ಜನರಲ್ ಸರ್ಜರಿ” ಯಲ್ಲಿ M.Sc, ಮಾಡಿದರು. 1965ರಲ್ಲಿ F.C.P.S ಮತ್ತು 1977ರಲ್ಲಿ F.I.C.S ಮಾಡಿದರು. 1958ರಿಂದ 1973ರ ಸಮಯದಲ್ಲಿ ವಾಡಿಯೂ, K.E.M, ಟಾ ಟಾ ಮತ್ತು V.S ನಲ್ಲಿ ಬಗ್ಗೆ 
ಶಿಕ್ಷಣವನ್ನು ಪಡೆದಿರುತ್ತಾರೆ                                                              
     ಅವರಿಗೆ ತನ್ನ ವೈದ್ಯಕೀಯ,  ಶೈಕ್ಷಣಿಕ ಸಮಯದಲ್ಲಿ “ಮನೋರಮಾ ಹಜರತ್ ಪಾರಿತೋಷಕ “(1954), ಡಾ| ಶಿವಲ್ ಕರ್ ಸಿಲ್ವರ್ ಮೆಡಲ್(1955) N.A ಪುರಂದರೆ – ಈ ಪಾರಿತೋಷಕಗಳು ಲಭಿಸಿವೆ.  1970ರಲ್ಲಿ U.S. ನಲ್ಲಿ ನ್ಯೂ ಯಾರ್ಕ್ ಮತ್ತು ಬಫೆಲೋ, ಇಲ್ಲಿ ಪ್ರಸ್ತುತ ಪಡಿಸಿದ ಪ್ರಬಂಧದ ಮೇಲೆ ಎರಡು ಪಾರಿತೋಷಕಗಳು  ಲಭಿಸಿವೆ. ಶರೀರದಲ್ಲಿ ಬದಲಿ ಮೂತ್ರಾಶಯ (ಕಿಡ್ನಿ) ವನ್ನು ಕಸಿ ಮಾಡಿದ ಭಾರತದ ಪ್ರಥಮ ಡಾಕ್ಟರ್ ಇವರು. 1971 ರಿಂದ 1987 ರ ನಡುವೆ ಭಾರತದ ಪ್ರಮುಖ ನಗರಗಳಲ್ಲಿ ವೈದ್ಯಕೀಯ ಸೆಮಿನಾರ್ ಗಳಲ್ಲಿ “ಕ್ಯಾನ್ಸರ್” ಬಗ್ಗೆ 32 ಪ್ರಬಂಧಗಳನ್ನು ಇವರು ಮಂಡಿಸಿದ್ದಾರೆ.  ಇವರು ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಟ್ರಸ್ಟಿ ಮತ್ತು ಜನರಲ್ ಸೆಕ್ರೆಟರಿಯೂ ಆಗಿದ್ದರು. ಮಹಾರಾಷ್ಟ್ರದ ರಾಜ್ಯಪಾಲರ “ ಆನರರಿ ಕ್ಯಾನ್ಸರ್ ಸ್ಪೆಷಲಿಸ್ಟ್”  ಆಗಿದ್ದರು.   ಮುಂಬೈ ಯೂನಿವರ್ಸಿಟಿಯಾ M.S. ಪರೀಕ್ಷೆಗೆ P.G ಟೀಚರ್ ಮತ್ತು ಮದ್ರಾಸ್ ಯೂನಿವರ್ಸಿಟಿಯ M.C.H ಅಂಕಾಲಜಿಯ ಎಕ್ಸಾಮಿನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.


 ಕೃಪೆ: ಗೌಡ ಸಾರಸ್ವತ ಸಮಾಜ ಪರಿಚಯ ಗ್ರಂಥ
ತರ್ಜುಮೆ : ಶ್ರೀ ಪುರುಷೋತ್ತಮ ಭಟ್ ದೇರ್ಕಜೆ

ಸಚಿನ್ ರಮೇಶ್ ತೆಂಡುಲ್ಕರ್

ಜನ್ಮ ದಿನಾಂಕ: 24-4-1973
ಕುಲದೇವರು : ಮಂಗೇಶ ಮಹಾಲಕ್ಷ್ಮೀ
ಜಾತಿಘಟಕ : ಭಾಲಾವಲೀಕಾರ್
ಗೋತ್ರ : ಧನಂಜಯ
ನಿವಾಸ:   ಉಷ:ಕಾಲ , ಸಾಹಿತ್ಯ ಸಹವಾಸ್, ಕಲಾ ನಗರ, ವಾಂದ್ರೆ(E)
                           ಮುಂಬೈ- 400051.
 ದೂರವಾಣಿ:  6421445(ಮನೆ)

     ಭಾರತೀಯ ಕ್ರಿಕೆಟ್ ಪ್ರಪಂಚದಲ್ಲಿ “WONDER BOY” ಎಂದೇ ಗೌರವದ ಉಲ್ಲೇಖ ಮತ್ತು ತನ್ನ ಕರ್ತೃತ್ವ ಶಕ್ತಿಯಿಂದ ಜಗದೆಲ್ಲೆಡೆ ಕ್ರಿಕೆಟ್ ಪಂಡಿತರು ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯ ವ್ಯಕ್ತಪಡಿಸಿದ ಅಭಿನವ ಅಭಿಮನ್ಯು  ನಮ್ಮ “ಸಚಿನ್ ತೆಂಡುಲ್ಕರ್ .
     ಮುಂಬೈಯ ಶಾರದಾಶ್ರಮ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವಾಗಲೇ ಓಟದ ಹುಡುಗನಾಗಿದ್ದ.  15-16 ವಯಸ್ಸಿನ ಬಾಲಕನಿದ್ದಾಗಲೇ ‘ರಣಜಿ ಕರಂಡಕ’ ದಲ್ಲಿ ಆಟವಾಡಿದ್ದ.  ಗುಜರಾತ್ ವಿರುದ್ಧದ ಈ ಆಟದಲ್ಲಿ ಶತಕವನ್ನು ಬಾರಿಸಿ ಮುಂದಿನ ಯಶಸ್ಸಿನ ಮುಹೂರ್ತವನ್ನು ಮಾಡಿದ್ದ.  ಇಷ್ಟು ಸಣ್ಣ ವಯಸ್ಸಿನಲ್ಲಿ ಶತಕವನ್ನು ಬಾರಿಸಿದ ವಿಶ್ವದಲ್ಲೇ ಎರಡನೆಯ ಬಾಲಕ ಎಂದು ದಾಖಲೆ ಮಾಡಿದ.  (ಮೊದಲ ವ್ಯಕ್ತಿ ಪಾಕಿಸ್ತಾನದ ಮುಶ್ತಾಕ್ ಮಹಮದ್).  ವಿದೇಶೀಯ ಪ್ರಥಮ ಪಂದ್ಯ ಅವನಿಗೆ ಪಾಕಿಸ್ತಾನದ ಎದುರಿಗಿತ್ತು.  16-17 ವರ್ಷದವನಿದ್ದಾಗ ಆ ಪಂದ್ಯದ ಸ್ಟೇಡಿಯಂ ಸುತ್ತಲೂ “ಮಗುವೇ , ಮನೆಗೆ ಹೋಗು, ಹಾಲುಕುಡಿ” ಎಂದು ದೊಡ್ಡ ದೊಡ್ಡ ಫಲಕಗಳನ್ನು ಹಾಕಿದ್ದರು.  ಆ ಪಂದ್ಯದಲ್ಲಿ ಸಚಿನ್ 59 ರನ್ ಮಾಡಿ ತನ್ನ ಪ್ರತಿಭೆಯನ್ನು ತೋರಿಸಿದ.  ಮರುದಿನ ಪಾಕಿಸ್ತಾನದ ಪತ್ರಿಕೆಗಳಲ್ಲಿ “ಎಚ್ಚರಿಕೆ ಎಚ್ಚರಿಕೆ ಬೆಂಕಿಯ ಚೆಂಡಿನಂತೆ ಮುನ್ನುಗ್ಗುತ್ತಿರುವ ಸಚಿನ್ ನನ್ನು ಎದುರಿಸುವುದು ಅಷ್ಟು ಸುಲಭವಲ್ಲ” ಎನ್ನುವರ್ಥದಲ್ಲಿ ಪ್ರಕಟವಾಯಿತು. ಮುಂದೆ 1990 ರಲ್ಲಿ ಇಂಗ್ಲೆಂಡ್ ವಿರುದ್ಧ, 1991-92 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್ ಗೆ ಆಡುವ ಅವಕಾಶ ದೊರೆಯಿತು.  ಈ ಎರಡೂ ಪಂದ್ಯಗಳಲ್ಲಿ ಅವನ ತಂತ್ರಗಾರಿಕೆಯನ್ನು ನೋಡಿ ಕ್ರಿಕೆಟ್ ಸಮೀಕ್ಷರು ಆಶ್ಚರ್ಯ ಚಕಿತರಾಗಿದ್ದಾರೆ.
     ಇಷ್ಟು ಸಣ್ಣ ವಯಸ್ಸಿನಲ್ಲಿ ಕ್ರಿಕೆಟ್ ಲೋಕದಲ್ಲಿ ವಿಸ್ಮಯವನ್ನು ಮಾಡಿದ ಈ ಬಾಲವೀರ ಭವಿಷ್ಯದಲ್ಲಿ ವಿಕ್ರಮ  ಸಾಧಕನಾಗುತ್ತಾನೆಂದು ಕ್ರಿಕೆಟ್ ಸಮೀಕ್ಷಕರು ಆಗಲೇ ಅಭಿಪ್ರಾಯ ಪಟ್ಟಿದ್ದಾರೆ.  ಪ್ರತಿ 5 ಪಂದ್ಯಗಳಲ್ಲಿ ಒಂದು ಶತಕವನ್ನಾದರು ಬಾರಿಸಿ, ಅಧಿಕ ರನ್  ಗಳಿಸುತ್ತಾ ಮುಂದುವರಿದ.  ಅತ್ಯಂತ ವಿನಯಶೀಲ ಗುಣದ ಸಚಿನ್ ತನ್ನ ಮಾತಾ-ಪಿತರನ್ನು, ಅಜಿತ್ ದಾದಾ ರನ್ನು ದೇವರಂತೆ ಕಾಣುತ್ತಿದ್ದ.  ಇಂದೂ “ಸಾಹಿತ್ಯ ಸಹವಾಸ” ದ ಹಳೆಯ ಮಿತ್ರರೊಂದಿಗೆ ಕ್ರಿಕೆಟ್ ಆಡುತ್ತಾನೆ. ಡೆನಿಸ್ ಕ್ರಾಂಪ್ಟನ್, ರಿಚರ್ಡ್ ಹಡ್ ಲಿ, ಸರ್ ಡಾನ್ ಬ್ರಾಡ್ಮನ್ ಇತ್ಯಾದಿ ಹಿರಿಯ ಆಟಗಾರರು ಸಚಿನ್ ತೆಂಡುಲ್ಕರ್ ನ್ನು ಪ್ರಶಂಶಿಸಿದ್ದಾರೆ.  ಚಿತ್ರಕಲೆ ಮತ್ತು ಪಾಪ್ ಮ್ಯೂಸಿಕ್ ಸಚಿನ್ ಗೆ ಬಹಳ ಇಷ್ಟ.
     ಸಚಿನ್ ತೆಂಡುಲ್ಕರ್ ಇವರ ಹಿರಿಯರು ಮೂಲತ: ರತ್ನಗಿರಿ ಜಿಲ್ಲೆಯ ಲಾಂಜಾ ತಾಲೂಕಿನ ಹರ್ಚೆಯವರು.  ಹರ್ಚೆ, ಭಡೆ, ಡೋರ್ಲೇ, ಇಲ್ಲೆಲ್ಲ ತೆಂಡುಲ್ಕರರ  ಕುಟುಂಬಗಳಿವೆ.  ಹರ್ಚೆ ಗೆ ಭಾಲಾವಲಿಯಿಂದ ಮುಚುಕುಂದಿ ನದಿಯನ್ನು ದಾಟಿ ಪ್ರಯಾಣಿಸುವುದಾದರೆ ಕೇವಲ 3 ಮೈಲಿ ದೂರ.
     ಇವರ ವಿಶ್ವದ ಕ್ರಿಕೆಟಿನ ನಂ. 1 ತಾರೆ ಎಂದು  ಪರಿಗಣಿಸಿ ಭಾರತ ಸರಕಾರ ರಾಜ್ಯ ಸಭಾ ಸದಸ್ಯನನ್ನಾಗಿ  ಆರಿಸಿದೆ.  ಭಾರತ ಸರಕಾರದ ಅತ್ಯುನ್ನತ “ಭಾರತ ರತ್ನ” ಪದವಿ ಪುರಸ್ಕೃತ ಸಚಿನ್ ತೆಂಡುಲ್ಕರ್ ಒಬ್ಬ ಭಾಲಾವಲೀಕಾರ್.

    ಕೃಪೆ:  ಗೌಡ ಸಾರಸ್ವತ ಪರಿಚಯ ಗ್ರಂಥ (ಮರಾಠಿ)
            (ಸಾರಸ್ವತ ಪ್ರಕಾಶನ ಮುಂಬೈ)

ತರ್ಜುಮೆ : ಶ್ರೀ ಪುರುಷೋತ್ತಮ ಭಟ್ ದೇರ್ಕಜೆ

ಭಾಲಾವಲೀಕಾರ್ ಸಾರಸ್ವತ ಬ್ರಾಹ್ಮಣರ ಒಂದು ನೋಟ

    ನಾವು ಭಾಲಾವಲೀಕಾರ್ ಸಾರಸ್ವತ ಬ್ರಾಹ್ಮಣರು.  ಸ್ಮಾರ್ತ ಸಂಪ್ರದಾಯದವರು.  ಆದಿಮಠ ಗೌಡಪಾದಾಚಾರ್ಯ ಕೈವಲ್ಯ ಮಠದ ಶಿಷ್ಯರು, ಷಟ್ಕರ್ಮಿಗಳು.  ಷೋಡಶ ಸಂಸ್ಕಾರಗಳನ್ನು ಆಚರಿಸುವವರು. 
     ಪೌರಾಣಿಕ ಹಿನ್ನೆಲೆಯಲ್ಲಿ ಉತ್ತರ ಭಾರತದ  ತ್ರಿಹೋತ್ರ ಪುರದಿಂದ ಭಗವಾನ್ ಪರಶುರಾಮನು ಸಾರಸ್ವತರನ್ನು ಗೋಮಾಂತಕಕ್ಕೆ ಕರೆತರುತ್ತಾನೆಂದು  ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಉಲ್ಲೇಖವಿದೆ.  ಕ್ರಿ.ಶ. 15ನೆ ಶತಮಾನದಲ್ಲಿ ಪೋರ್ಚುಗೀಸರು ಗೋಮಾಂತಕ(ಗೋವಾ)ವನ್ನು ಆಕ್ರಮಣ ಮಾಡಿ, ಹಿಂದುಗಳನ್ನು ಕ್ರೈಸ್ತ ಮತಕ್ಕೆ  ಮತಾಂತರಿಸಿ, ಅಸಂಖ್ಯ ದೇವಸ್ಥಾನಗಳನ್ನು ಕೆಡವಿ, ಚರ್ಚ್ ಗಳನ್ನು ಕಟ್ಟಿದರು.  ಹಣ, ಸಂಪತ್ತು ಲೂಟಿ ಮಾಡಿದರು.  ಸಮಾಜದ ಮೇಲೆ, ಧಾರ್ಮಿಕ ನೆಲೆಗಟ್ಟಿನ ಮೇಲೆ ಆಕ್ರಮಣ ನಡೆಸಿದಾಗ ಸಾರಸ್ವತರೆಲ್ಲ ಅಸಹಾಯಕ, ಅಭದ್ರ ಸ್ಥಿತಿಗೆ ತಳ್ಳಲ್ಪಟ್ಟರು.  ಆಗ ಕೆಲವರು ಉತ್ತರಕ್ಕೆ ರತ್ನಗಿರಿ, ಮುಂಬೈ ಕಡೆಗೂ, ದಕ್ಷಿಣಕ್ಕೆ ಕಾರವಾರ, ಮಲಬಾರ್ ಕಡೆಗೂ ವಲಸೆ ಹೋದರು.  ಹಾಗೆ ಉತ್ತರದ ಕುಡಾಳ ಪ್ರಾಂತದ ರಾಜಾಪುರದ ಭಾಲಾವಲಿಯಲ್ಲಿ ನೆಲೆ ನಿಂತ ಸಾರಸ್ವತ ಸಮಾಜವು ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣರು.
ಮಹಾರಾಷ್ಟ್ರದಲ್ಲಿ ಭಾಲಾವಲೀಕಾರರು;  ಮಹಾರಾಷ್ಟ್ರದಾದ್ಯಂತ ಸುಮಾರು 10 – 12000 ದಷ್ಟು ಸಂಖ್ಯೆಯಲ್ಲಿ ಭಾಲಾವಲೀಕಾರರಿದ್ದಾರೆ.  ಈಗ ದುಪ್ಪಟ್ಟಾಗಿರಬಹುದು.  ರಾಜಾಪುರ, ಭಾಲಾವಲೀ, ಹರ್ಚೆ, ಡೋರ್ಲೆ, ರತ್ನಗಿರಿ,ಪುಣೆ, ಆಲೀಬಾಗ್ , ಮುಂಬೈ , ಕುಡಾಳ್ , ಸಾವಂತವಾಡಿ, ಕೊಲ್ಹಾಪುರ, ಥಾಣೆ, ಬೆಳಗಾಂ, ನಿಪಾಣಿ( ಕನಾರ್ಟಕ) ಇಲ್ಲೆಲ್ಲ ಹರಡಿದ್ದಾರೆ. ಜನಸಂಖ್ಯೆಯಲ್ಲಿ ಕಡಿಮೆ ಎಂದೆನಿಸದರು ಉತ್ತಮ ಪದವಿಗಳನ್ನು ಗಳಿಸಿ ಅತ್ಯುನ್ನತ ಸ್ಥಾನದಲ್ಲಿ ಮೆರೆದವರೂ ಇದ್ದಾರೆ. I.C.S, I.A.S.ಅಧಿಕಾರಿಗಳಾಗಿ, ಹೈ ಕೋರ್ಟ್ ನ್ಯಾಯಾಧೀಶರಾಗಿ, ಜಿಲ್ಲಾಧಿಕಾರಿಗಳಾಗಿ, C.A, ವಕೀಲರು, ಇಂಜಿನಿಯರ್, ಡಾಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ.  ಆದರೆ ರಾಜಕೀಯವಾಗಿ ಮುಂದುವರಿದವರು ವಿರಳ ಎನ್ನಬಹುದು.
    1881ರಿಂದಲೇ ಮಹಾರಾಷ್ಟ್ರದಲ್ಲಿ ಭಾಲಾವಲೀಕಾರರ ಸಂಘಟನೆಗೆ ಚಾಲನೆ ದೊರೆತಿದೆ.  ಸಾರಸ್ವತ ಹಿತವರ್ಧಕ ಸಮಾಜ ಸಾರಸ್ವತ ಸಾಮಾಜಿಕ ಸಮೂಹ ,ಸಾರಸ್ವತ ಆತ್ಮೋನ್ನತಿ ಸಮಾಜ, ಸಾರಸ್ವತ ಅಸೋಷಿಯೇಶನ್, ದಾದರ್ ಸಾರಸ್ವತ ಯೂನಿಯನ್ ಈ ಐದು ಸಂಘಟನೆಗಳು ಒಗ್ಗೂಡಿ 7-10-1924 ವಿಜಯದಶಮಿ ಯ ದಿನ ಸಾರಸ್ವತ ಹಿತವರ್ಧಕ ಮಂಡಲವು ಭಾಲಾವಲೀಯಲ್ಲಿ ಉದಯವಾಯಿತು.  ಮುಂದೆ 1964 ರಲ್ಲಿ ಮುಂಬೈ ಗೆ ವರ್ಗಾಯಿಸಲ್ಪಟ್ಟಿತು.  ವಿದ್ಯಾಭ್ಯಾಸ ಮತ್ತು ಇತರ ಚಟುವಟಿಕೆಗಳನ್ನು ನಡೆಸುವ ಈ ಸಂಸ್ಥೆಯಲ್ಲಿ 17 ಲಕ್ಷ ರೂ ಠೇವಣಿ ಇತ್ತು.  ಮುಂಬೈ ನ ಮಾಹಿಮ್ ನಲ್ಲಿ ಕೇಂದ್ರ ಕಛೇರಿ ಇದೆ. ತೆಂಡುಲ್ಕರ್ ಸಭಾ ಭವನವಿದೆ.
     ಭಾಲಾವಲೀಯಲ್ಲಿ ಲಕ್ಷ್ಮೀ ಮಾಧವ ಮಂದಿರ, ಗಜಾನನ ಮಂದಿರ, ಶಿನ್ಕಾರರ ಭಗವತಿ ಮಂದಿರ, ರವಳನಾಥ ಮಂದಿರ, ಪಿಶೇದವಾಡಿಯ ಖಾಂಬೇಶ್ವರ ದೇವಸ್ಥಾನಗಳು, ರಾಜಾಪುರದ ಬಳಿ ಸಾಖಳ್ ಕರ್ ವಾಡಿಯ ಹನುಮಾನ್ ಮಂದಿರ, ಕೋ ದವಲಿಯಲ್ಲಿ ಶಿನ್ಕಾರರ ದತ್ತ ಮಂದಿರ ಹೀಗೆ ಹಲವು ದೇವಸ್ಥಾನಗಳು ಭಾಲಾವಲೀಕಾರ ಸಾರಸ್ವತ ಬ್ರಾಹ್ಮಣ ಸಮಾಜದ ಆರಾಧನಾ ಮಂದಿರಗಳಾಗಿವೆ.
     ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ನಲ್ಲಿ ನಂ.1 ಧ್ರುವ ತಾರೆ ಭಾರತರತ್ನ ಶ್ರೀ ಸಚಿನ್ ತೆಂಡುಲ್ಕರ್ಇವರ ಹಿರಿಯರು ಭಾಲಾವಲಿ ಬಳಿಯ ಹರ್ಚೆಯವರು.   ಮುಂಬೈಯಲ್ಲಿ ಕ್ಯಾನ್ಸರ್  ತಜ್ಞ ಮತ್ತು ಕಿಡ್ನಿ ಬದಲಿಸಿ ಕಸಿ ಮಾಡುವುದರಲ್ಲಿ ಭಾರತದ ಪ್ರಥಮ ಡಾಕ್ಟರ್ ಮುರಳೀಧರ ಕಾಮತ್ ಹೀಗೆ ಹತ್ತು ಹಲವಾರು ಮಂದಿ ಜಾಗತಿಕ, ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. 
ದಕ್ಷಿಣದಲ್ಲಿ ;  ಡಿ.ಪಿ.ನಾಯಕ್ M .A . (ಕೊಲಂಬಿಯ) ಅವರು ಕುಡಾಳ ದೇಶಕರ ಪುಸ್ತಕದಲ್ಲಿ ವಿವರಿಸಿದಂತೆ ಕ್ರಿ.ಶ. 1749 ರ ಅಂದಾಜಿಗೆ ಅಂಗರೆ ತುಳಜಿಯು ಕುಡಾಳ ಪ್ರಾಂತದ ಮೇಲೆ ಆಕ್ರಮಣ ಮಾಡುತ್ತಾನೆ.  ಆ ಸಂದರ್ಭದಲ್ಲಿ ಭಾಲಾವಲೀಕಾರರು ಮಂಗಳೂರು , ಮಂಜೇಶ್ವರ ಮುಂತಾದ ಕಡೆ ವಲಸೆ ಬಂದು ಜ್ಯೋತಿಷ್ಯ, ವೈದ್ಯಕೀಯ  ರಂಗದಲ್ಲೂ ಸೇವೆ ಸಲ್ಲಿಸಿರುತ್ತಾರೆ.  ಕುಂಬಳೆ, ಕಾಸರಗೋಡು, ಬಂಟವಾಳ, ಸುಳ್ಯ, ಪುತ್ತೂರು, ಕೊಡಗಿನ ವಿರಾಜಪೇಟೆಯ ವರೆಗೂ ಇಂದು ಹರಡಿರುತ್ತಾರೆ.

 ದೇವಸ್ಥಾನಗಳು:  ಕ್ರಿ. ಶ. 1800 ರ ಅಂದಾಜಿಗೆ ಪೆರ್ಲದ ಬಳಿ ಖಂಡಿಗೆ ಎಂಬಲ್ಲಿ ಲೋಟಲಿಕಾರ್ ಕುಟುಂಬದವರು ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಕಟ್ಟಿ ಆರಾಧಿಸುತ್ತಿದ್ದರು.  ಈಗ ಈ ದೇವಸ್ಥಾನವು ಕಾಟುಕುಕ್ಕೆ ಬಳಿ ಮೊಗೇರಿನಲ್ಲಿದೆ.  ಇಲ್ಲಿ ಬಂಟ್ವಾಳ, ಕಾಸರಗೋಡು, ಪುತ್ತೂರು, ಸುಳ್ಯ, ಕೊಡಗು ಭಾಗದಿಂದ ಆರಿಸಲ್ಪಟ್ಟ ಆಡಳಿತ ಮಂಡಳಿಯಿದೆ. ಮೋಂತಿಮಾರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನವು 16  ಮನೆತನಗಳಿಂದ ಕಟ್ಟಲ್ಪಟ್ಟ ಪ್ರಾಚೀನ ದೇವಸ್ಥಾನ.  ಖ್ಯಾತ ಇತಿಹಾಸ ತಜ್ಞ ಡಾ. ಗುರುರಾಜ ಭಟ್ಟರು ಇಲ್ಲಿನ ದೇವರ ಮೂರ್ತಿಗಳು 800 ವರ್ಷದಷ್ಟು ಪ್ರಾಚೀನವೆಂದು ಅಭಿಪ್ರಾಯ ಪಟ್ಟಿದ್ದಾರೆ.
     ಸುಳ್ಯ ಕೊಡಿಯಾಲಬೈಲ್ ಸಿನ್ಕಾರ್ ಶೇಷಪ್ಪಯ್ಯ ಪ್ರಭುಗಳು ಸ್ಥಾಪನೆ ಮಾಡಿದ  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಮಂಡೆಕೋಲು ಬೊಳುಗಲ್ಲು ಶೇಂದ್ರೆ ಕುಟುಂಬದ ಗಣಪ್ಪಯ್ಯರು ಸ್ಥಾಪನೆ ಮಾಡಿದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಗಳಿವೆ.  ಇತ್ತೀಚಿಗೆ ಸುಳ್ಯ ಭಾಲಾವಲೀಕಾರ್ ಸಾರಸ್ವತ ಬ್ರಾಹ್ಮಣ ಸಮಾಜದ ವತಿಯಿಂದ ದುರ್ಗಾಪರಮೇಶ್ವರಿ ಭಜನಾ ಮಂದಿರವು ಸ್ಥಾಪನೆಯಾಗಿದೆ.

ಭಾಲಾವಲೀಕಾರರ  ಸಂಘಟನೆಗಳು : ಸಾಮಾಜಿಕ ಉನ್ನತಿಯ ಉದ್ದೇಶದಿಂದ ಕೊಡಂಗೆ ನಾರಾಯಣ ನಾಯಕ್, ವಿ.ಟಿ. ಬೋರ್ಕರ್ ಕತ್ತಲೆಕಾನ ಮುಂತಾದ ಹಿರಿಯರಿಂದ ಮೋಂತಿಮಾರು ದೇವಸ್ಥಾನದ ಬಳಿ 1923 ರಲ್ಲಿ ಭಾಲಾವಲೀಕಾರ್ ಸಾರಸ್ವತ ಬ್ರಾಹ್ಮಣ ಸಂಘವು ಪ್ರಾರಂಭವಾಯಿತು.  ಮುಂದೆ ಪುತ್ತೂರು ದರ್ಬೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ ನಮ್ಮ ಸಂಘ ಶತಮಾನೋತ್ಸವ ದತ್ತ ಸಾಗುತ್ತಿದೆ.  1929 ನೆ ಇಸವಿಯಲ್ಲಿ ಎಪ್ರಿಲ್ 15, 16 ರಂದು ಸುಳ್ಯ ಕೃಷ್ಣ ನಾಯಕರ (ಜಿಲ್ಲಾ ಕೃಷಿ ಅಧಿಕಾರಿ) ಅಧ್ಯಕ್ಷತೆಯಲ್ಲಿ ಪ್ರಥಮ ಭಾಲಾವಲೀಕಾರ್ ಸಮ್ಮೇಳನವು ಮೋಂತಿಮಾರಿನಲ್ಲಿ ನಡೆದಿತ್ತು. 1985 ರಲ್ಲಿ ಕರ್ನಾಟಕ ಮತ್ತು ಕೇರಳ ಭಾಲಾವಲೀಕಾರ್ ಪ್ರತಿನಿಧಿ ಸಮ್ಮೇಳನ ಕಿಲಂಗೋಡಿ ಶಂಕರ ರಾಯರ ಅಧ್ಯಕ್ಷತೆಯಲ್ಲಿ  ನಡೆದಿತ್ತು.  ಕುಕ್ಕಾಡಿ ಮುಕುಂದ ನಾಯಕ್, ಕುಂಟಿಕಾನ  ಮಾಸ್ತರ್ ರಾಮಚಂದ್ರ ನಾಯಕ್ ರ ಸೇವೆ ಸ್ಮರಣೀಯ . 
     ಸುಳ್ಯದಲ್ಲಿ 1979 ರಲ್ಲಿ ಭಾಲಾವಲೀಕಾರ್ ಸಾರಸ್ವತ ಬ್ರಾಹ್ಮಣ ಸಮಾಜವೆಂಬ ಸಂಘಟನೆ ಪ್ರಾರಂಭವಾಗಿದ್ದು, ಕುಕ್ಕಂಬಳ್ಳ ವೈಕುಂಠ ಪ್ರಭುಗಳ ಪ್ರಯತ್ನದಿಂದ 30 ಸೆಂಟ್ಸ್  ಸ್ಥಳ ಸಂಘಕ್ಕೆ ಸರಕಾರದಿಂದ ದೊರಕಿದೆ.  ದುರ್ಗಾ ಪರಮೇಶ್ವರಿ ಸಭಾಭವನ ಸಮಾಜ ಬಾಂಧವರ ಪ್ರಯತ್ನದಿಂದ ನಿರ್ಮಾಣವಾಗಿದೆ.
      ಮೋಂತಿಮಾರು ಮತ್ತು ವಿಟ್ಲದಲ್ಲಿ ಸಮಾಜಸೇವಾ ಸಂಘಗಳಿದ್ದು ಸೇವಾ ಕಾರ್ಯಗಳು ನಡೆಯುತ್ತಿವೆ. 

ಐತಿಹಾಸಿಕ ಸಾಕ್ಷಿಗಳು : ಭಾಲಾವಲೀಕಾರರಲ್ಲಿ ನಾವೆಲ್ಕಾರ್, ಪೋತ್ಕಾರ್, ವಾಗ್ಲೆ, ಲೋಟಲೀಕಾರ್, ಬೋರ್ಕರ್, ಸಿನ್ಕಾರ್, ಮಡ್ಕೆಕರ್, ಬಾಂದಿ, ವಡೆಕರ್ ಮುಂತಾದ ಉಪನಾಮಗಳಿದ್ದು ಇವರೆಲ್ಲ ಗೋವಾ ಸಾರಸ್ವತರೆಂದೇ ತಿಳಿಯಲ್ಪಡುತ್ತದೆ.  ಕಾರಣ – ನಾವೇಲಿ, ವಾಗಳೆ, ಲೋಟಲಿ, ಬೋರಿ, ಮಡ್ಕೈ, ಬಾಂದಿವಡೆ ಹೀಗೆ ಗೋವಾದ ಊರುಗಳವರು ಎಂದು ತಿಳಿಯುತ್ತದೆ.  ಮಂಗೇಶ, ನಾಗೇಶ, ರವಳನಾಥ, ಶಾಂತಾದುರ್ಗ, ಮಹಾಲಕ್ಷ್ಮೀ, ಗಣಪತಿ ಮುಂತಾದ ಭಾಲಾವಲೀಕಾರರ ಕುಲದೇವರ ದೇವಸ್ಥಾನಗಳು ಗೋವಾದಲ್ಲಿವೆ.  ಕಾಶ್ಯಪ,ಅತ್ರಿ, ಭಾರದ್ವಾಜ, ವಸಿಷ್ಠ, ವತ್ಸ, ಧನಂಜಯ ಮುಂತಾದ ಹತ್ತು ಗೋತ್ರಗಳು ಭಾಲಾವಲೀಕಾರರಲ್ಲಿವೆ. 
     1657 ರಲ್ಲಿ ಕಾಶಿ ಮಠಾಧೀಶ ಶ್ರೀ ಉಪೇಂದ್ರ ತೀರ್ಥರು ಹೊರಡಿಸಿದ ರಾಯಸ ಪತ್ರದಲ್ಲಿ ಮತ್ತು ಗೋಕರ್ಣ ಮಠಾಧೀಶ ಶ್ರೀ ಮದಿಂದಿರಾ ಕಾಂತ ಸ್ವಾಮೀಜಿಯವರ ಆದೇಶದಂತೆ ಭಾಲಾವಲೀಕಾರರು, ಬಾರ್ದೇಶಕಾರರು, ಪೆಡಣೆಕಾರರು, ಸಾಸಷ್ಠಿಕಾರರು, ಲೋಟಲಿಕಾರರು ಇವರೆಲ್ಲ ಗೌಡ ಸಾರಸ್ವತ ಬ್ರಾಹ್ಮಣರಾಗಿರುತ್ತಾರೆ ಎಂಬ ಉಲ್ಲೇಖವಿದೆ. (ಕೃಪೆ: ಸಾರಸ್ವತ ಭೂಷಣ – ಮಠಸ್ಥ  ರಾಮಚಂದ್ರ ಗಣೇಶ ಶರ್ಮ) (1950) ಕೈವಲ್ಯ ಮಠದ ಇತಿಹಾಸ ಗ್ರಂಥದಲ್ಲೂ ಭಾಲಾವಲೀಕಾರರ ಬಗ್ಗೆ ಉಲ್ಲೇಖವಿದೆ.
     1968 ರಲ್ಲಿ ಮಂಗಳೂರು ಜಿಲ್ಲಾಧಿಕಾರಿ H. L. ನಾಗೇ ಗೌಡರು ನೀಡಿದ ತೀರ್ಪಿನಲ್ಲಿ ಮೋಂತಿಮಾರು ದೇವಸ್ಥಾನವು ಭಾಲಾವಲೀಕಾರ್ ಸಾರಸ್ವತ ಬ್ರಾಹ್ಮಣ ಸಮಾಜದ್ದೆಂದು ಉಲ್ಲೇಖವಿದೆ. 12-7-1910 ರ ಮುಂಬೈ ಗಜೆಟಿಯರ್, 17-1-1898 ರ ಮುಂಬೈ ಹೈ ಕೋರ್ಟ್ ತೀರ್ಪು, 1950 ರಲ್ಲಿ ಪ್ರಕಟವಾದ ಮಠಸ್ಥ   ಗಣೇಶ ರಾಮಚಂದ್ರ ಶರ್ಮ ಇವರು ಬರೆದ ಸಾರಸ್ವತ ಭೂಷಣ ಗ್ರಂಥ, 1994 ರಲ್ಲಿ ಪ್ರಕಟವಾದ ಗೌ.ಸಾ.ಬ್ರಾ. ಸಮಾಜ ಪರಿಚಯ ಗ್ರಂಥ (ಲೇಖಕ- ರವೀಂದ್ರ ಪಾಟ್ಕರ್ ).  ಈ ಮೇಲಿನ ದಾಖಲೆಗಳಲ್ಲಿ ಭಾಲಾವಲೀಕಾರರು ಗೌಡ ಸಾರಸ್ವತ ಬ್ರಾಹ್ಮಣರೆಂದು ಉಲ್ಲೇಖವಿದೆ.  ಸುಮಾರು 1800 ರಿಂದೀಚೆಗೆ ಲಭ್ಯವಾದ ದಾಖಲೆ ಪತ್ರಗಳಲ್ಲಿ  ಸಮಾಜಕ್ಕೆ ಭಾಲಾವಲೀಕಾರ್ ಎಂದು ಹೆಸರು ದೊರೆಯುತ್ತದೆ. 
     1926 ರಲ್ಲಿ ಮೊದಲ ವೈದಿಕ ಪಾಠ ಶಾಲೆಯು ಬೆಳ್ಳಿಪ್ಪಾಡಿ ಜ್ಯೋತಿಷಿ ರಾಮಣ್ಣ ನಾಯಕರಿಂದ ಬೆಳ್ಳಿಪ್ಪಾಡಿಯಲ್ಲಿ  ಪ್ರಾರಂಭವಾಯಿತು.  ಕುಂಟಿಕಾನ  ಮಾಸ್ತರ್ ರಾಮಚಂದ್ರ ನಾಯಕರ ಪ್ರಯತ್ನದಿಂದ 1961 ರ ನಂತರ ಅನೇಕ ವಿದ್ಯಾರ್ಥಿಗಳು ಗೋವಾ ಕವಳೆಯಲ್ಲಿ  ವೈದಿಕ ವಿದ್ಯಾಭ್ಯಾಸವನ್ನು ಪಡೆದರು.  ಇಂದಿಗೂ ಅಲ್ಲಿ ವೇದ ವಿದ್ಯೆಯನ್ನು ಕಲಿಯುತ್ತಿದ್ದಾರೆ.
     ಸಮಾಜದಲ್ಲಿ ಡಾಕ್ಟರ್, ವಕೀಲರು, ಇಂಜಿನಿಯರ್ ರು, ಜಿಲ್ಲಾ ಫಾರೆಸ್ಟ್ ಆಫೀಸರ್, ರೇಂಜ್ ಫಾರೆಸ್ಟ್ ಆಫೀಸರ್ , ಹಿರಿಯ  ಪೋಲೀಸ್ ಇನ್ಸ್ ಪೆಕ್ಟರ್,ಅಧ್ಯಾಪಕರು, ಲೆಕ್ಚರರ್ ಪ್ರಿನ್ಸಿಪಾಲ್ ಮುಂತಾದ ಹುದ್ದೆಯಲ್ಲಿ ಅನೇಕರು ಶೋಭಿಸಿದ್ದಾರೆ.  ರಾಜಕೀಯವಾಗಿ ಕಿಲಂಗೋಡಿ ವಿನಯಚಂದ್ರ ಇವರು M.L.C. ಯಾಗಿ, ಕೋಡಿಂಬಾಡಿ ಬಾಲಕೃಷ್ಣ ಬೋರ್ಕರ್  ಜಿಲ್ಲಾ ಪರಿಷತ್ ಅಧ್ಯಕ್ಷ ರಾಗಿಯೂ ಉನ್ನತ ಹುದ್ದೆಗಳಿಗೆ ಏರಿದ್ದಾರೆ.  S. R. ರಂಗಮೂರ್ತಿ ಪುಣಚ ಇವರು ಪ್ರತಿಷ್ಠಿತ ಕ್ಯಾಂಪ್ಕೋ ಅಧ್ಯಕ್ಷರಾಗಿ, K.P.S.C ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
     ವಿವಾಹ, ಉಪನಯನಗಳಲ್ಲಿ ಕೇಳ್ವಾಣ್(ಮಂಗಳ ಸ್ನಾನ) “ಕರೆ ಇಳೆಂಚೆ’ (ತೈಲ ಹರಿದ್ರಾರೋಪಣ), ಬ್ರಾಹ್ಮಣ ಸಂತರ್ಪಣೆಯ ಸಮಯದಲ್ಲಿ ಹಸ್ತೋದಕ, ಬ್ರಹ್ಮಾರ್ಪಣ, ಶ್ಲೋಕ ಪಠನ ಇತ್ಯಾದಿ. ವಿಶೇಷಗಳು ಈ ಸಮಾಜದಲ್ಲಿವೆ.
     ಕೊಡಂಗೆ ನಾರಾಯಣ ನಾಯಕ್, ವಿ.ಟಿ.ಬೋರ್ಕರ್, ಕುಂಟಿಕಾನ ರಾಮಚಂದ್ರ ನಾಯಕ್ ಮುಂತಾದ ಗಣ್ಯ ಮುಂದಾಳುಗಳು ಮಹಾರಾಷ್ಟ್ರದ ಭಾಲಾವಲಿಗೆ ಭೇಟಿಕೊಟ್ಟು ಸಂಪರ್ಕಿಸಿ ಮಾಹಿತಿ ಪಡೆದಿರುತ್ತಾರೆ.  ಉಡುಪಿ, ಕಾರ್ಕಳದ ರಾಜಾಪುರ ಸಾರಸ್ವತ ರನ್ನು ಸಂಪರ್ಕಿಸಿ ವಿವಾಹ ಸಂಬಂಧ ಬೆಳೆಸಲು ಶ್ರಮವಹಿಸಿ ಕಾರ್ಯಸಿದ್ಧಿ ಪಡೆದಿರುತ್ತಾರೆ.  ಪುತ್ತೂರಿನಲ್ಲಿ ಸೋದರ ಸಮಾಜ ಗೌಡ ಸಾರಸ್ವತರೊಂದಿಗೆ ಒಳ್ಳೆಯ ಬಾಂಧವ್ಯವಿದೆ.
     ದ.ಕ. ಜಿಲ್ಲೆಯ ಭಾಲಾವಲೀಕಾರರು ಇತರ ಸಾರಸ್ವತ ಪಂಗಡಗಳಷ್ಟು ಮುಂದುವರಿಯದಿದ್ದರೂ, ಸಾಕಷ್ಟು ಶ್ರಮವಹಿಸಿ ಮುಂದೆ ಬರುತ್ತಿದ್ದಾರೆ. ಎಲ್ಲರೂ ಒಂದಾಗಿ ಮುನ್ನಡೆಯೋಣ.

ಶುಭಂ
----
ಪುರುಷೋತ್ತಮ ಭಟ್ ದೇರ್ಕಜೆ


(ಭಾಲಾವಲೀಕಾರ್ ಸಾರಸ್ವತ ಬ್ರಾಹ್ಮಣ ಸಮಾಜ ಸುಳ್ಯ, ಜಿ.ಎಸ್.ಬಿ.ಸೇವಾ ಸಂಘ ಪುತ್ತೂರು,ಭಾಲಾವಲೀಕಾರ್ ಉತ್ತಮ ಜೀವನ ಸಹಕಾರ ಸಂಘ ಬೇಟೋಳಿ ಕೊಡಗು ರವರ ಪರವಾಗಿ)