Saturday, July 10, 2021

ವಿಶ್ವಾಸ್ ಗಜಾನನ ತೆಂಡುಲ್ಕರ್

 


ಜನನ ದಿನಾಂಕ: 23-06-1946

ಜನ್ಮ ಸ್ಥಳ : ಮುಂಬೈ

ಜಾತಿಘಟಕ : ಭಾಲಾವಲೀಕರ್

ಕುಲದೇವರು: ಮಂಗೇಶ

ಗೋತ್ರ : ಧನಂಜಯ

      ಸ್ವಂತ ಕರ್ತತ್ವ ಶಕ್ತಿಯಿಂದ  ಹೊಸ ಹೊಸ ತಂತ್ರಜ್ಞಾನದಿಂದ ತನ್ನ ವ್ಯವಸಾಯವನ್ನು ಆಧುನೀಕರಿಸಿದ ವ್ಯಕ್ತಿತ್ವ ಇವರದು.  1963 ರಲ್ಲಿ ಪಿಂಟೋ ವಿಲ್ಲಾ ಶಾಲೆಯಲ್ಲಿ ಉಚ್ಛ ಶ್ರೇಣಿಯಲ್ಲಿ ಉತ್ತೀರ್ಣರಾದರು.  ಮುದ್ರಣ ತಂತ್ರಜ್ಞಾನದ 3ವರ್ಷದ ಅವಧಿಯ ಕೋರ್ಸ್ ನ್ನು ಜೆ.ಜೆ. ಸ್ಕೂಲ್ ಆಫ್ ಆರ್ಟ್ ಸಂಸ್ಥೆಯಲ್ಲಿ ಯಶಸ್ವಿಯಾಗಿ ಪೂರೈಸಿದರು.  ಬಳಿಕ ಗವರ್ನ್ಮೆಂಟ್ ಸೆಂಟ್ರಲ್ ಪ್ರೆಸ್ ನಲ್ಲಿ 1 ವರ್ಷದ ಶಿಕ್ಷಣ ಪಡೆದು ಲಂಡನ್ ಗೆ ಹೋದರು.  ಅಲ್ಲಿ ಲಂಡನ್ ಕಾಲೇಜ್ ಆಫ್ ಪ್ರಿಂಟಿಂಗ್ ಸಂಸ್ಥೆಯಲ್ಲಿ 2 ವರ್ಷದ ಪದವಿ ಶಿಕ್ಷಣ ಪಡೆದರು.  ಮಾನ್ಯವರ ಸಂಸ್ಥೆಯಲ್ಲಿ ಮುದ್ರಣದ ವಿವಿಧ ವಿಭಾಗಗಳ ಬಗ್ಗೆ 6 ತಿಂಗಳ ಅನುಭವ ಪಡೆದು ಮುಂಬೈಗೆ ಬಂದರು.  1970 ರಿಂದ 74 ರವರೆಗೆ ವಿವಿಧ ಸಂಸ್ಥೆಗಳಲ್ಲಿ ಜಾಹಿರಾತು ಕೆಲಸಗಳನ್ನು ಮಾಡಿದರು.

     ಈ ಎಲ್ಲ ಅನುಭವಗಳನ್ನು ಒಗ್ಗೂಡಿಸಿ 1974 ರಲ್ಲಿ ಲೋವರ್ ಪರೇಲ್ ನಲ್ಲಿ ಹತ್ತು ಮಂದಿ ಸಿಬ್ಬಂದಿಯೊಡನೆ “ನವ ಪ್ರಕಾಶ ಪ್ರಿಂಟಿಂಗ್ ಪ್ರೆಸ್” ಪ್ರಾರಂಭಿಸಿದರು.  ಆಗ ವರ್ಷಕ್ಕೆ 6 ಲಕ್ಷ ರೂ ಸಂಪಾದನೆಯಾಗುತ್ತಿತ್ತು.  18 ವರ್ಷಗಳಲ್ಲಿ ಅವರು ಮೂರು ಮುದ್ರಣಾಲಯಗಳ ಒಡೆಯರಾದರು.  ಒಟ್ಟು 150 ಸಿಬ್ಬಂದಿಗಳಿದ್ದು ವಾರ್ಷಿಕ 4 ಕೋಟಿಯ ವ್ಯವಹಾರ ನಡೆಯುತ್ತಿದೆ.  ವರ್ಣಮುದ್ರಣ, ಕಾರ್ಟೂನ್ ಮುದ್ರಣಕ್ಕೆ ಅವರ ಮುದ್ರಣಾಲಯ ಹೆಸರುವಾಸಿಯಾಗಿದೆ.  ನವ ಯುವಕರಿಗೆ ಪ್ರೋತ್ಸಾಹ ನೀಡಿ ಸಹಕರಿಸುವ ಉದಾರ ಗುಣ ಅವರದು.

ಇತಿ,

BSBS  


Saturday, July 3, 2021

ಶಂಕರರಾವ್ ರಘುನಾಥ ಹಳದ್ವಣೀಕರ್

ಜನ್ಮ : 18-10-1883 

ವಸಿಷ್ಠ ಗೋತ್ರ

ಭಾಲಾವಲೀಕರ್

ಕೈ. ಶಂಕರ್ ರಾವ್ ಊರ್ಫ್ ಭಾವೂ ಸಾಹೇಬ್ ರಘುನಾಥ ಹಳದ್ವಣೀಕರ್ ರವರು ಬಾಂಧಣ್ (ಅಲೀಬಾಗ್) ಎಂಬ ಊರಿನಲ್ಲಿ ಬಡ ಕುಟುಂಬದಲ್ಲಿ ಜನಿಸಿದರು.  ಹಲದವಣೀ ಗೋವಾ ದ ಒಂದು ಹಳ್ಳಿ.  ಭಾವೂ ಸಾಹೇಬರ ಪ್ರಾಥಮಿಕ ವಿದ್ಯಾಭ್ಯಾಸ ಪೇಣ್ ಎಂಬಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸ ಬಡೋದ್ಯಾದಲ್ಲಿ, ಇಂಟರ್ ಆರ್ಟ್ಸ್ ವರೆಗಿನ ಶಿಕ್ಷಣ ಮುಂಬೈ ವಿಲ್ಸನ್ ಕಾಲೇಜಿನಲ್ಲಿ ನಡೆಯಿತು.  1905 ರಲ್ಲಿ ಮುಂಬೈಯ G.P.O.ನಲ್ಲಿ ಉದ್ಯೋಗ ಪ್ರಾರಂಭಿಸಿದರು.  ಅವರು ಬಹಳಷ್ಟು ಕಾಲ ಪಾಕಿಸ್ತಾನದಲ್ಲಿ ವಾಸ್ತವ್ಯವಿದ್ದರು.  1932ರಲ್ಲಿ ಸಿಂಧು ಪ್ರಾಂತ್ಯದಲ್ಲಿ ಮಹಾರಾಷ್ಟ್ರ ಮಂಡಲದ ಮುಂಚೂಣಿ ನಾಯಕರಾಗಿದ್ದರು.  1937 ರಲ್ಲಿ “ಆಫ್ರಿನಾಮಾ” ಮತ್ತು 6th ಎಡ್ವರ್ಡ್ ‘ಕೊರೋನೆಶನ್’ ಪದವಿ ಲಭಿಸಿತ್ತು.  ಹೆಡ್ ಪೋಸ್ಟ್ ಮಾಸ್ತರ್ ಪದವಿವರೆಗೂ ಭಡ್ತಿಯಾಗಿ  1938 ರಲ್ಲಿ ಕಾಳಬಾದೇವಿ ಪೋಸ್ಟ್ ಆಫೀಸ್ ನಲ್ಲಿ ನಿವೃತ್ತಿಯಾದರು.

     ಸೇವಾ ನಿವೃತ್ತಿಯ ಬಳಿಕ ತಮ್ಮ ಅಲೀಬಾಗ್ ನ ತಾಡ್ ವಾಗಳೆ ಊರಿನಲ್ಲಿ ಕೃಷಿ ವ್ಯವಸಾಯಕ್ಕಿಳಿದರು.     ತಮ್ಮ ಮಾತೋಶ್ರೀಯವರ ಸ್ಮರಣಾರ್ಥ ಅಲೀಬಾಗ್ ನ ಹೆಣ್ಣು ಮಕ್ಕಳ ಶಾಲೆಗೆ  13-06-1945 ರಂದು ಕೈ.ಅಣ್ಣಾ ಸಾಹೇಬ್ ಕರ್ವೇಯವರಲ್ಲಿ ರೂ.10,000 ದೇಣಿಗೆಯನಿತ್ತರು.   1949ರಲ್ಲಿ ನಡೆದ ‘ ಸಾರಸ್ವತ ಹಿತವರ್ಧಕ ಮಂಡಲ ‘ ದ ರಜತ ಮಹೋತ್ಸವದ ಅಧ್ಯಕ್ಷರಾಗಿ ಆಯ್ಕೆಯಾದರು.  ಸಾರಸ್ವತ ವಿದ್ಯಾರ್ಥಿ ಸಹಾಯಕ ಮಂಡಳಿ ಮತ್ತು ಸಾರಸ್ವತ ದೀನ ವತ್ಸಲಸಂಘಗಳ ವಿಶ್ವಸ್ಥ (ಟ್ರಸ್ಟಿ) ಯಾಗಿಯೂ ಕಾರ್ಯ ನಿರ್ವಸಿರುತ್ತಾರೆ.   ಪೊಯ್ನಾಡ್ ಮತ್ತು ಪಂಚ ಕ್ರೋಶಿ ಪರಿಸರದಲ್ಲಿಯೂ ಅನೇಕ ಕಾರ್ಯಗಳನ್ನು ಮಾಡಿದರು.  ಅಲ್ಲಿ ಎರಡು ಮಹಡಿ ಕಟ್ಟಡವೊಂದನ್ನು  ತಾನೇ ಕಟ್ಟಿಸಿ,ಹೈ ಸ್ಕೂಲ್  ಪ್ರಾರಂಭಿಸಿ ತನ್ನ ಕನಸನ್ನು ನನಸುಗೊಳಿಸಿದರು.  ತನ್ನ ಪ್ರಥಮ ಪತ್ನಿ ಕೈ. ಸರಸ್ವತೀಬಾಯಿ ಯವರ ಸ್ಮರಣಾರ್ಥ 1957 ರಲ್ಲಿ ‘ ಸಾರಸ್ವತ ಹಿತವರ್ಧಕ’ ಮಂಡಲಕ್ಕೆ ರೂ. 10000 ದೇಣಿಗೆಯಿತ್ತರು.  ನಿರ್ವ್ಯಸನಿ, ಆತ್ಮೀಯ ಮಿತ್ರ ಸ್ವಭಾವ, ಕಾರ್ಯ ತತ್ಪರತೆ ಮುಂತಾದ ಗುಣರತ್ನಗಳಿಂದ ಕೀರ್ತಿವಂತರಾಗಿದ್ದರು.

ಇತಿ,

BSBS