Saturday, July 18, 2015

ಸಾರಸ್ವತ ಸುಧಾ (ಮಹಾರಾಷ್ಟ್ರ ಬಾಲವಲೀಕಾರ ಗೌಡಸಾರಸ್ವತ ಬ್ರಾಹ್ಮಣರು- (ಪ್ರಕರಣ-೧೩ ))

  ಮೊದಲಿಗೆ ಮಹಾರಾಷ್ಟ್ರದಲ್ಲಿ ವಾಸವಾಗಿರುವ ಬಾಲಾವಲಿಕಾರ ಗೌಡ ಸಾರಸ್ವತ ಬ್ರಾಹ್ಮಣರ ಮಾಹಿತಿಯನ್ನು ಕೊಟ್ಟು ಅನಂತರ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಈ ಸಮಾಜದವರ ಮಾಹಿತಿಯನ್ನು ಬರೆಯಲು ತೊಡಗುತ್ತೇನೆ.
  ಸ್ವಲ್ಪ ಮಾಹಿತಿಯನ್ನು ಬಾರದೇಶಕಾರ ಗೌಡ ಬ್ರಾಹ್ಮಣರ ಇತಿಹಾಸ ಪುಸ್ತಕದಿಂದ ಮೊದಲೇ ಕೊಟ್ಟಿರುತ್ತೇನೆ.ಇದರಿಂದಲೂ ಮುಂಬೈ ಗೆಜೆಟಿಯರ್ನಲ್ಲಿ ಹಾಗೂ ಕಾಶೀಮಠದ ರಾಯಸದಲ್ಲಿ ಕೊಟ್ಟಿರುವಂತೆ ಇವರು ಗೋಮಾಂತಕದಿಂದ ಬಾಲಾವಳಿ ಪ್ರದೇಶಕ್ಕೆ ವಲಸೆ ಹೋದವರೆಂದು ಸ್ಪಸ್ತವಾಗಿದೆ. ಅಲ್ಲದೆಯೇ ಇವರಿಗೆ ತಮ್ಮ ಮೂಲ ನಿವಾಸದ ಗ್ರಾಮಗಳಿಂದ ಬಂದ ಬೋರ್ಕಾರ್, ಸಾಕಲ್ಕರ್, ಬಾಂಧಿವಡೀಕಾರ್, ವಾಲಾವಲಿಕಾರ್, ಹಳದನಿಕಾರ್, ಚಿಮ್ಬಲ್ಕಾರ್, ನಾವೆಲ್ಕರ್, ಲೋಟಲಿಕಾರ್ ಇತ್ಯಾದಿ ಉಪನಾಮಗಳಿಂದಲೂ ಈ ಸಮಾಜವು ಗೋಮಾಂತಕೀಯ ಗೌಡ ಸಾರಸ್ವತ ಬ್ರಾಹ್ಮಣರೇ ಎಂದು ರುಜು ಆಗುತ್ತದೆ.೧೮೯೨ಮತ್ತು ೧೯೦೯ ರಲ್ಲು ಶ್ರೀ ಗೌಡಪಾದಾಚಾರ್ಯ ಮಠದಿಂದ  ಕಾರಣಾಂತರದಿಂದ ಮಠದ ಸಂಪರ್ಕವನ್ನು ಕಳೆದುಕೊಂಡು ಈ ಸಮಾಜವು ಪುನಃ ಮಠದ ಸಂಪರ್ಕವನ್ನು ಬೆಳೆಸಿಕೊಳ್ಳಬೇಕೆಂಬ ರಾಯಸವನ್ನು ಶ್ರೀ ಕೈವಲ್ಯ ಮಠದಿಂದ ಹೊರಡಿಸಲಾಗಿತ್ತಲ್ಲದೆ ಮುಂಬೈಯ ಪತ್ರಿಕೆಗಳಲ್ಲಿಯೂ ಪ್ರಕಟಿಸಲಾಗಿತ್ತು.ದ.ಕ. ಜಿಲ್ಲೆಯಲ್ಲಿದ್ದವರ ಗಮನಕ್ಕೆ ಮಾತ್ರ ಇದು ಬಂದಿರಲಿಲ್ಲ.ಬಹುಶಃ ಸ್ವಾಮಿಜೀಯವರಿಗೂ ನಮ್ಮ ಸಾರಸ್ವತ ಪಂಗಡವು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹರಡಿರುವುದು ತಿಳಿದಿರಲಿಲ್ಲ. ನಾವು ಕವಳೆ ಮಠದ ಅನುಯಾಯಿಗಳೆಂದು ತಿಳಿದುಕೊಂಡದ್ದು ಕೊಂಕಣಾ ಖ್ಯಾನದ ಆಧಾರದಿಂದ.ಆದುದರಿಂದ ಕೊಂಕಣಾಖ್ಯಾನಕಾರನು ಏನು ಹೇಳುತ್ತಾನೋ ನೋಡೋಣ.ನಮ್ಮ ಹಿರಿಯರು ನಾವು ಬಾಲಾವಲಿಕಾರರೆಂದು ಹೇಳಿಕೊಂಡದ್ದು ಹಿಂದಿನ ಕೆಲವು ದಾಸ್ಥಾವೇಜುಗಳಿಂದಲೂ  ಖಾನೆಶುಮಾರಿ ದಾಖಲೆಗಳಿಂದಲೂ ತಿಳಿಯುತ್ತದೆ.
ಅತಾಂ ಬಾಲಾವಳಿಕಾರ್ ಅಣಿ ಅವಸರೆ |
ತೇ ರಾಜಪುರಾ ಪ್ರಾಂತಿ ಅಹೇತ್ ಖರೇ ||
  ಈ ಆಧಾರದ ಮೇಲೆ ನಮ್ಮ ಸಂಘದ ಅದ್ಯಕ್ಷರಾದ ಪಂಡಿತ್ ನಾರಾಯಣ ವಾಮನ ನಾಯಕ್ ಮತ್ತು ವಿ.ಟಿ. ಬೋರ್ಕಾರ್ ನಮ್ಮ ಸಂಘದ ಕಾರ್ಯದರ್ಶಿಗಳಿಬ್ಬರು ೧೯೩೩ರಲ್ಲಿ ರಾಜಪುರದ ಬಳಿಯ ಬಾಲಾವಲಿಗೂ ಹಾಗೂ ಮುಂಬೈಗೂ  ಹೋಗಿ ಈ ಸಮಾಜದ ಸದ್ಗೃಹಸ್ಥರನ್ನು ಭೇಟಿಯಾಗಿ ಸಮಾಜದ ಇತಿಹಾಸವನ್ನು ಸ್ವಲ್ಪ ಸಂಗ್ರಹಿಸಿ ಬಂದುದಾಗಿದೆ.
  ಬಾಲಾವಲಿಕಾರರನ್ನು ಕುಡಾಳ ದೇಶಕಾರರಿಗೆ ಹೋಲಿಸುತ್ತಾರೆ.ಕುಡಾಳ ದೇಶಕಾರರು ಉತ್ತರ ಭಾರತದ ಗಂಗಾ ನದಿ ತೀರದಿಂದ ಬಂದವರೆನ್ನುತ್ತಾರೆ.ಸಾರಸ್ವತ ದೇಶದಿಂದ ಕಾಲಾಂತರದಲ್ಲಿ ಸಾರಸ್ವತರು ಪೂರ್ವಕ್ಕೆ ಕನೋಜಕ್ಕೂ ಮುಂದೆ ಗಂಗಾ ತೀರದ ಪ್ರದೇಶ ಅರ್ಥಾತ್ ಗೌರ್ಕಿಂವಾ ಗೌಡ್ ದೇಶ ನಂತರ ಮಿಥಿಲ ಮುಂದೆ ಉತ್ಕಲ ಪ್ರದೇಶಕ್ಕೆ ಸರಿದರೆಂದು ಶತಪಥ ಬ್ರಾಹ್ಮಣದಲ್ಲಿ ಹೇಳಿದೆ. ಹಾಗು ಡಾ! ಬಾಹುದಜೀ, ಡಾ! ಭಂಡಾರ್ಕರ್ ಮೊದಲಾದ ಇತಿಹಾಸಕಾರರ ಮತವೂ ಹೀಗೆಯೇ ಆಗಿರುವುದರಿಂದ ಬಾಲಾವಲಿಕಾರರು ಕುಡಾಳ ದೇಶಕಾರರ ಒಂದು ವಿಭಾಗವೆಂದು ಸಾಧಿಸಿದರೂ ಸಾರಸ್ವತರೇ ಆಗಿದ್ದಾರೆ. ಕುಡಾಳ ದೇಶಕಾರರು ಹೇಳುವಂತೆ ಬಾಲಾವಳಿಕಾರರು ತಾವು ಸಾರಸ್ವತರಲ್ಲವೆನ್ನುವಂತಿಲ್ಲ. ಸಾಮಾನ್ಯವಾಗಿ ಉತ್ತರಭಾರತವನ್ನು ಗೌಡದೇಶವೆಂದು, ದಕ್ಷಿಣಭಾರತವನ್ನು ದ್ರಾವಿಡ ದೇಶವೆಂದು ಹೇಳುವ ಅರ್ಥದಲ್ಲೂ ಹಾಗು ನಮ್ಮ ಕೈವಲ್ಯ ಮಠದ ಪರಂಪರಾಗತ ಸಂಪ್ರದಾಯದಂತೆಯೂ ಬಾಲಾವಲಿಕಾರರು ಗೌಡಸಾರಸ್ವತ ಬ್ರಾಹ್ಮಣರೇ ಆಗಿರುತ್ತಾರೆ. ಈ ಸಮಾಜದ ಉಪ ನಾಮಗಳು ಗೋಮಾoತಕದಲ್ಲಿ ವಾಸಿಸುತ್ತಿದ್ದ ಗ್ರಾಮಗಳ ಹೆಸರಿನಿಂದಲೇ ಬಂದವುಗಳಾಗಿವೆ ಮತ್ತು ನಮ್ಮ ಕುಲ ದೇವರುಗಳ ದೇವಾಲಯಗಳೆಲ್ಲ ಗೋಮಾಂತಕದಲ್ಲೇ ಇರುತ್ತವೆ. ಆದರೆ ಕುಡಾಳ ದೇಶಕಾರರೂ ಭಾಲಾವಲಿಕ್ಕಾರರು, ರಾಜಾಪುರಕಾರರೂ, ಫಡನೀಕಾರರು ತಮ್ಮ ಉಪ ಪಂಗಡವೆoದು ಹೇಳುತ್ತಿರುವಾಗ ನಾವೇಕೆ ಅಲ್ಲಗಳೆಯಬೇಕು? ಗೌಡ ಸಾರಸ್ವತ ಬ್ರಾಹ್ಮಣರ ಮೂಲವೇ ಸಾರಸ್ವತ ಬ್ರಾಹ್ಮಣ ಮಹರ್ಷಿಗಳಾದ ಬ್ರಹ್ಮದೇವನ ಮಾನಸ ಪುತ್ರರಿನ್ದಲ್ಲವೇ? ಈ ವಿಚಾರದಲ್ಲಿ ವಿಶಾಲಮನಸ್ಸಿನಿಂದ ವ್ಯವಹರಿಸುವುದು ನಮ್ಮ ಸಂಘಟನೆಗೆ ಅನುಕೂಲವಾಗುವುದು.
            ಗೋಮಾಂತಕದಲ್ಲಿ ಮುಸಲ್ಮಾನ ಮತ್ತು ಕ್ರೈಸ್ತ ಮತಕ್ಕೆ ಹಿಂದುಗಳನ್ನು ಮತಾಂತರಿಸುವ ವೇಳೆ ತಮ್ಮ ಧರ್ಮ ಮತ್ತು ಪ್ರಾಣ ರಕ್ಷಣೆಗಾಗಿ ತಮ್ಮ ಕುಲದೇವರ ಮೂರ್ತಿಗಳೊಂದಿಗೆ ಇತರ ಸರ್ವಸ್ವವನ್ನೂ ಕಳೆದುಕೊಂಡು ಹಡಗುಗಳ ಮೂಲಕ ಜಲಮಾರ್ಗವಾಗಿ ವಲಸೆ ಬಂದು ರತ್ನಗಿರಿ ಜಿಲ್ಲಾ ರಾಜಪುರ ತಾಲೂಕಿನ ಭಾಲಾವಲಿ ಪ್ರದೇಶದಲ್ಲಿ ವಾಸಿಸಿದ ಗೋವಾ ಸಾರಸ್ವತರೇ ಭಾಲಾವಲಿಕಾರ್ ಕಿಂವಾ ಭಾಲವಲಿಕಾರ್ ಗೌಡ ಸಾರಸ್ವತ ಬ್ರಾಹ್ಮಣರಾಗಿರುತ್ತಾರೆ.ಭಾಲಾವಲಿ ಗ್ರಾಮವು  ರಾಜಪುರ ಪಟ್ಟಣದಿಂದ ಸುಮಾರು ೧೫ ಮೈಲಿ ಒಳನಾಡಿನಲ್ಲಿರುವುದು. ನಾನೂ ಈ ಪ್ರದೇಶವನ್ನು ಮೂರು ಸಲ ಸಂದರ್ಶಿಸಿ ಈ ಸ್ವಸಮಾಜದ ಪ್ರತ್ಯಕ್ಷ ಮಾಹಿತಿಯನ್ನು ಪಡೆದಿರುತ್ತೇನೆ.ಅಲ್ಲಿ ನೆಲೆಸಿರುವವರು ಕೃಷಿಯನ್ನೇ ಅವಲಂಬಿಸಿದರು. ಕುಟುಂಬಗಳು ಬೆಳೆಯುತ್ತಾ ಹೋದಂತೆ ರಾಜಪುರ,ಲಾಂಜಾ,ಕುಡಾಳ,ಸಾವಂತವಾಡಿ ಮೊದಲಾದ ಭಾಗಗಳಿಗೂ ಮುಂದೆ ಕೊಲ್ಲಾಪುರ, ಥಾನಾ,ಮುಂಬೈ,ಪೂನಾ,ಪ್ರದೇಶಗಳಿಗೂ ತಮ್ಮ ಉತ್ತಮ ಜೀವನದ ಉದ್ದೇಶದಿಂದ ಹರಡಿರುತ್ತಾರೆ.ಆದರೂ ಅವರ ಕೂಡುಗಟ್ಟಿನ ಕೇಂದ್ರವು ಭಾಲಾವಲಿಯೇ ಆಗಿತ್ತು. ಅವರ ದೇವ ಮಂದಿರಗಳೂ ಭಾಲಾವಲಿಯಲ್ಲಿಯೇ  ಇರುತ್ತವೆ. ಅವರ ಕುಟುಂಬಗಳು ಹನ್ನೆರೆಡು ಪ್ರದೇಶಗಳಿಗೆ ಹರಡಿದಾಗ ಭಾಲಾವಲಿಯು ಅಕ್ರಾ ನಾವಾಚಿ ಗಾದಿ ಆಯಿತು.ಇಪ್ಪತ್ತೆರೆಡು ಪ್ರದೇಶಗಳಿಗೆ ಹರಡಿದಾಗ  ಭಾಲಾವಲಿಯು ಭಾವೀಸ್ ಗಾವಾಂಚಿ ಗಾದಿ ಎಂದು ರೂಢಿಗೆ ಬಂತು. ನಂತರ ಕುಟುಂಬಗಳು ಬೆಳೆದಂತೆ ಮಹಾರಾಷ್ಟ್ರದ ಇತರ ಭಾಗಗಳಿಗೂ ಹರಡುತ್ತಾ ಈಗಲೂ ಉದ್ಯೋಗದ ಮೇಲೆ ಭಾರತಾದ್ಯಂತ ಹಾಗೂ ಇಂಗ್ಲೆಂಡ್ ಅಮೆರಿಕಾಗಳಲ್ಲೂ ಕೆಲವು ಕುಟುಂಬಗಳು ನೆಲೆಸಿರುತ್ತವೆ.  ೧೯೪೮ರಲ್ಲಿ ಮಹಾರಾಷ್ಟ್ರದಲ್ಲಿ ಭೂ ಮಸೂದೆ ಜಾರಿಗೆ ಬಂದ ಮೇಲೆ ಹೆಚ್ಚಿನ ಕುಟುಂಬಗಳು ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡು ರತ್ನಗಿರಿ, ಕೊಲ್ಲಾಪುರ ,ಥಾಣಾ,ಡೊಂಬಿವಿಲಿ,ಮುಂಬೈ ಮೊದಲಾದ ದೊಡ್ಡ ದೊಡ್ಡ ನಗರಗಳನ್ನು ಸೇರಿರುತ್ತಾರೆ. ಮೊದಲು  ಕೃಷಿಕರೂ ಕಲಬಾ (ರಾಯಗಢ) ಜಿಲ್ಲೆಯಲ್ಲಿ ದೊಡ್ಡ ಜಮೀನ್ದಾರರೂ ಆಗಿದ್ದವರು ಈಗ ಉಚ್ಚ ಶಿಕ್ಷಣವನ್ನು ಪಡೆದು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಇತರ ಸಾರಸ್ವತ ಬ್ರಾಹ್ಮಣರಂತೆ ಮುಂದುವರೆದಿದ್ದಾರೆ. ಶೇಕಡಾ ಹತ್ತು ಕುಟುಂಬಗಳು ಮಾತ್ರ ಹಳ್ಳಿ ಪ್ರದೇಶಗಳಲ್ಲಿ ಕೃಷಿಕರಾಗಿ ಉಳಿದಿರುವುದು ಕಂಡುಬರುತ್ತದೆ. ಈ ಸಮಾಜದಲ್ಲಿ ಐ.ಸಿ.ಎಸ್, ಐ.ಎ.ಎಸ್ ಆಫೀಸರರಾಗಿಯೂ, ಹೆಸರಾಂತ ಡಾಕ್ಟರರಾಗಿಯೂ ,ಶಿಕ್ಷಣ ತಜ್ಞರಾಗಿಯೂ, ಕವಿಗಳೂ ಆಗಿರುವವರಿದ್ದಾರೆ. ಅಂತೆಯೇ ಸರಕಾರದಲ್ಲೂ ಕಲೆಕ್ಟರ್, ಡೆಪ್ಯುಟಿ ಕಲೆಕ್ಟರ್,ನ್ಯಾಯಾಧೀಶರೂ ಆದವರಿದ್ದಾರೆ. ರಾಜಕೀಯದಲ್ಲೂ, ಮುನಿಸಿಪಲ್ ಕೌನ್ಸಿಲರಾಗಿ ,ಜಿಲ್ಲಾ ಪರಿಷತ್ತಿನಲ್ಲಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರೂ ಇದ್ದಾರೆ. ಅಲ್ಲದೆ ಗ್ರಂಥಕಾರರೂ, ಪತ್ರಿಕಾಕಾರರೂ, ಈ ಸಮಾಜದಲ್ಲಿ ಇದ್ದಾರೆ. ಭಾಲಾವಲಿ ಅಕ್ರ ನಾವಾಂಚಿ ಗಾದಿ ಎಂದು ರೂಡಿಯಲ್ಲಿದ್ದಾಗ ಅವರ ವಾಸ್ತವ್ಯ ಪ್ರದೇಶಗಳು , ೧,ಭಾಲಾವಳಿ ,೨.ಹರ್ಚೆ,೩.ಡೂರ್ಲಿ,೪. ಡಾವ್ಲಿ ,೫. ಪೊಂಬೆವ್ ೬.ಬಡೆ ,೭.ಧಾವ್ದೆ ೮.ಕಾನಾವ್ಗಿ ೯.ಕೊತಾಪುರ್ ೧೦.ಶಿವನೆ ೧೧.ಮೊಗರೆ ೧೨.ರುಂಡೆ –ಥಾಟೆಗಳಾಗಿವೆ. ಇವೆಲ್ಲಾ ರಾಜಪುರ ತಾಲೂಕಿನಲ್ಲೆ ಇದ್ದವುಗಳಾಗಿವೆ. ರಾಜಾಪುರದಲ್ಲಿ ವಾಸವಾಗಿದ್ದ ಇವರ ಪೈಕಿಯವರನ್ನೇ ಗೊಷ್ಭಾರಿಯಿಂದ ಕೊಂಕಣಾಖ್ಯಾನಕಾರನು ರಾಜಪುರಿ ಅಥವಾ ರಾಜಾಪುರಕಾರರೆಂದು ಇನ್ನೊಂದು ಪಂಗಡವಾಗಿ ವರ್ಣಿಸಿದಂತೆ ಕಾಣುತ್ತದೆ.ಗೋತ್ರ,ಪ್ರವರ,ರೀತಿ-ರಿವಾಜು ,ಧಾರ್ಮಿಕ ಸಂಸ್ಕಾರಗಳು,ಕುಲದೇವರು, ಶಾಖೆ,ಸೂತ್ರ,ವೇದ, ಇವುಗಳನ್ನೆಲ್ಲ ಹೋಲಿಸಿ ನೋಡಿದ್ದಲ್ಲಿ ಇವರಲ್ಲಿ ಯಾವ ಭೇದವನ್ನೂ ಗುರುತಿಸುವಂತಿಲ್ಲ. ಮಹಾರಾಷ್ಟ್ರವಾಸಿಗಳಾದವರು ಮಾತ್ರ ಶುದ್ಧ ಮರಾಟಿಯನ್ನು ಮಾತನಾಡುತ್ತಾರೆ. ಮಹಾರಾಷ್ಟ್ರದಲ್ಲಿ ಈ ಭಾಲಾವಲಿಕ್ಕಾರರಿಗೆ, ಕೆಲವು ಕುಟುಂಬಗಳಿಗೆ ವತನ್,ಸನ್ನದ್,ಜಮೀನ್ದಾರಿ ಸನ್ನದ್, ಆದಿಲಶಾಹಿ ವಾ ಪೇಶ್ವೆ ಸರಕಾರದಿಂದ ಸಿಕ್ಕಿರುತ್ತದೆ. ಈ ಸನ್ನದ್ದಿನಲ್ಲಿ ಸರಕಾರಿ ಖೋತ್,ಖಾಸಗಿ ಖೋತ್ ಹೀಗೆ ಎರೆಡು ವಿಧಗಳುಂಟು. ಹೀಗೆ ಖೋತ್,ಸನ್ನದ್ ಪಡೆದವರು ಭಾಲವಲಿಕಾರ್ ಸಮಾಜದಲ್ಲೇ ಇದ್ದಾರೆ. ಹೀಗೆ ಖೋತ್, ಸನ್ನದ್ ಪಡೆದ ಕುಟುಂಬಗಳಲ್ಲಿ  ತೆಂಡೂಲ್ಕರ್ ,ವಾಗ್ಲೆ,ಪೂತ್ಕಾರ್,ಪಾಟ್ಕರ್, ಕಾಮತ್,ವಾಕದೆ ಮೊದಲಾದವು ಮುಖ್ಯವಾಗಿವೆ.
            ಇವರಿಗೆ ಭೂಮಿಯ ಕರವನ್ನು ಹೆಚ್ಹು-ಕಡಿಮೆ ಮಾಡುವ ಅಧಿಕಾರವೂ ಇರುತ್ತಿತ್ತು. ದುಷ್ಕಾಲ ಉಂಟಾದಲ್ಲಿ, ನೆರೆ ಬಂದಲ್ಲಿ ಕಿಸ್ತನ್ನು ರದ್ದುಮಾಡಲು ಅಥವಾ ಕಡಿಮೆ ಮಾಡಲು ಮಾತ್ರ ಇವರಿಗೆ ಅಧಿಕಾರ ಇರುವುದಲ್ಲದೆ ಹೆಚ್ಚು ಕಮ್ಮಿ ಭೂಮಿಯಲ್ಲಿ ಬೆಳೆ ಹೆಚ್ಚಿಸುತ್ತಾ ಹೋದಲ್ಲಿ ಕರವನ್ನು ಹೆಚ್ಚಿಸುವ ಅಧಿಕಾರವೂ ಇವರಿಗಿತ್ತು. ಹೀಗೆ ಬಾಲಾವಲಿಕಾರರಿಗೆ ಕುಲಕರ್ಣಿ, ನಾಡಕರ್ಣಿ ಹುದ್ದೆಗಳು ವಿಜಯನಗರದ ಆಳ್ವಿಕೆಯಲ್ಲಿ ಸಿಕ್ಕಿ ಪರಂಪರಾಗತವಾಗಿ ನಡೆದು ಬಂದ ದಾಖಲೆಗಳಿವೆ. ಈಗಲೂ ಅನೇಕ ಗ್ರಾಮಗಳಲ್ಲಿ ತಲಾಥಿಗಳು (ಗ್ರಾಮ ಕರನೀಕರು) ಭಾಲಾವಲಿಕಾರರೇ ಇರುತ್ತಾರೆ.
         ನಮ್ಮ ಚರಿತ್ರೆಯ “ಸಾರಸ್ವತ ಸುಧಾ” ಗ್ರಂಥದಿಂದ ಸಂಗ್ರಹಿಸಲಾಗಿದೆ. (ಪುಟ ಸಂಖ್ಯೆ -೧೬೮ -೧೭೧)
          
ಸಂಗ್ರಹ,                                                                                                
ಕೆ.ಧನಂಜಯ ವಾಗ್ಲೆ                                                                                      
ಪುತ್ತೂರು